Tuesday, September 16, 2008

News Update: 16.09.2008

ನಿರ್ದಾಕ್ಷಿಣ್ಯ ಕ್ರಮ: ಸಿ‌ಎಂ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಾನೂನನ್ನು ಕೈಗೆ ತೆಗೆದುಕೊಂಡು ಸಮಾಜದ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಲಲಾಗುವುದು ಎಂದರು.

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚರ್ಚ್‌ಗಳ ಮೇಲೆ ಭಾನುವಾರ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಾನೂನನ್ನು ಕೈಗೆ ತೆಗೆದುಕೊಂಡು ಸಮಾಜದ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಕ್ಕೆ ಸೋಮವಾರ ಸಂಜೆ ಆಗಮಿಸಿದ ಅವರು, ಗೃಹಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅನ್ಯ ಧರ್ಮದವರ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ, ಈ ದುಷ್ಕೃತ್ಯದ ಹಿಂದೇ ಯಾರೇ ಇದರೂ ಉಗ್ರಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ರಾಜಕೀಯ ಸ್ವಾರ್ಥ: ಪ್ರಕರಣವನ್ನು ಪಕ್ಷಬೇಧ ಮರೆತು ಖಂಡಿಸಬೇಕಾಗಿದ್ದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆಪಾದಿಸಿದರು.

ಖರ್ಗೆ ಅವರು ವಿಧಾನಸಭೆಯನ್ನು ವಿಸರ್ಜನೆಗೆ ಆಗ್ರಹಿಸಿದ್ದಾರೆ. ವಿಧಾನಸಭೆ ವಿಸರ್ಜನೆಗೆ ಇದು ಸೂಕ್ತ ಸಂದರ್ಭವಲ್ಲ. ಈ ಹೇಳಿಕೆಯಿಂದ ಕಾಂಗ್ರೆಸ್ ಉದೇಶವೇನೆಂಬುದು ಸ್ಪಷ್ಟವಾಗುತ್ತದೆ ಎಂದರು.

ಬಂದ್‌ಗೆ ಅವಕಾಶವಿಲ್ಲ,

ಶ್ರೀರಾಮ ಸೇನೆ ಮಂಗಳವಾರ ಮಂಗಳೂರು ಬಂದ್‌ಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಬಂದ್‌ಗೆ ಅವಕಾಶವಿಲ್ಲ, ಬಂದ್, ರಸ್ತೆ ತಡೆ ಮಾಡುವವರನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಯಾರನ್ನೂ ರಕ್ಷಿಸುವುದಿಲ್ಲ : ಉಗ್ರ ಕ್ರಮ : ಸಿ.ಎಂ.

ಮಂಗಳೂರು, ಸೆ. ೧೫: ಮಂಗಳೂರಿನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಘಟನೆಗಳಲ್ಲಿ ಬಜರಂಗದಳವಾಗಲಿ ಯಾವುದೇ ಸಂಘಟನೆಯಿರಲಿ, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಉಗ್ರ ಕ್ರಮ ಜರಗಿಸಲಾಗುವುದು. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದಿರುವ ಘಟನೆಗಳು ಖಂಡನೀಯ. ಯಾವುದೇ ಕಾರಣಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯವನ್ನು ಸಹಿಸುವುದಿಲ್ಲ. ಯಾರೂ ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಂತಹ ಕೃತ್ಯಗಳಲ್ಲಿ ತೊಡಗುವ ವರನ್ನು ರಾಜಕೀಯ, ಧರ್ಮ, ಜಾತಿ ಗಮನಿಸದೆ ಉಗ್ರ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ. ಇಂತಹ ಕೃತ್ಯಗಳಲ್ಲಿ ಯಾರೇ ತೊಡಗಲಿ ಸರಕಾರ ಸೂಕ್ತ ಕ್ರಮ ಜರಗಿಸಲಿದೆ ಎಂದು ವಿವರಿಸಿದರು.

ಜಿಲ್ಲೆಯ ಪರಿಸ್ಥಿತಿಯ ಕುರಿತಂತೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ಅವಲೋಕಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಯಾರು ಭಾಗಿಗಳಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದರು.

ಅವರವರ ಧರ್ಮ ಅನುಸರಿಸಲು ಎಲ್ಲರಿಗೂ ಅವಕಾಶವಿದೆ. ಆದರೆ ಇತರರ ಮತ, ಧರ್ಮಗಳನ್ನು ಅವಹೇಳನ ಮಾಡಲು, ಅಶ್ಲೀಲವಾದ ಸಾಹಿತ್ಯ ಪ್ರಕಟಿಸಲು ಸಂವಿಧಾನದ ಪ್ರಕಾರ ಯಾರಿಗೂ ಅಧಿಕಾರವಿಲ್ಲ. ಕೆಲವು ಸಂಘಟನೆಗಳು ಈ ರೀತಿಯಲ್ಲಿ ಅಶ್ಲೀಲವಾದ ಸಾಹಿತ್ಯವನ್ನು ಪ್ರಕಟಿಸುತ್ತಿವೆಯೆಂಬ ಮಾಹಿತಿ ಸರಕಾರಕ್ಕೆ ಬಂದಿದೆ. 
ಯಾವುದೇ ಧರ್ಮದವರಿಗೂ ಸಮಸ್ಯೆಗಳಿದ್ದರೆ ಸರಕಾರದೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶವಿದೆ. ಮತ್ತೆ ಇಂತಹ ಘಟನಾವಳಿ ಮರುಕಳಿಸಬಾರದು. ಜನರು ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಅವರು ಸೂಚಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಅದ್ಯತೆ. ಎಲ್ಲಾ ಧರ್ಮದವರನ್ನು ಒಂದೇ ತಾಯಿಯ ಮಕ್ಕಳಂತೆ ಕಾಣುವವರು ನಾವು. ಸರಕಾರ ಅಧಿಕಾರ ಸ್ವೀಕರಿಸಿದಾಕ್ಷಣ ಎಲ್ಲಾ ಧರ್ಮದ ನಾಯಕರ ಸಭೆ ನಡೆಸಿ ಆಡಳಿತ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದೆ. ಎಲ್ಲರಿಗೂ ಸಮಾನವಾದ ಸವಲತ್ತುಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇಂದು ಕ್ರಿಶ್ಚಿಯನ್ ಸಮುದಾಯದ ನಾಯಕರು ತನ್ನನ್ನು ಭೇಟಿ ಮಾಡಿ ಈ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಂದಾಗಿ ಬಾಳಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಯಾವುದೇ ರೀತಿಯಲ್ಲಿ ಮತಾಂತರಕ್ಕೆ ಅವಕಾಶ ನೀಡದಂತೆ ತಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ನಿನ್ನೆಯ ಘಟನೆಗಳಿಗೆ ಕಾರಣರಾದವರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆಯನ್ನು ಅವರಿಗೆ ನೀಡಿದ್ದೇನೆ ಎಂದರು.

ಕಾಂಗ್ರೆಸ್, ಜೆಡಿ‌ಎಸ್ ಪಕ್ಷಭೇದ ಬಿಟ್ಟು ನಿನ್ನೆ ಘಟನೆಗಳನ್ನು ಖಂಡಿಸುತ್ತವೆಯೆಂದು ನಂಬಿದ್ದೆ. ಅವರು ಅದರಲ್ಲೂ ಸ್ವಾರ್ಥ ರಾಜಕಾರಣ ಮಾಡಲು ಹೊರಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನ ಸಭೆ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದಾರೆ. ಮಾಡಲಿ ಬಿಡಿ, ಅವರ ಉದ್ದೇಶವೇನೆಂಬುದು ಜನರಿಗೆ ತಿಳಿಯುತ್ತದೆ. ಅವರು ರಾಜಕೀಯ ಮಾಡದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದರೆ ಉತ್ತಮ ಎಂದು ಮುಖ್ಯಮಂತ್ರಿಹೇಳಿದರು.

ಕಾಂಗ್ರೆಸಿಗರು ಇಂದು ನಿರುದ್ಯೋಗಿಗಳು. ಅವರಿಗೆ ಈಗ ಉದ್ಯೋಗ ಸಿಕ್ಕಿದಂತಾಗಿದೆ ಎಂದು ಛೇಡಿಸಿದರು.

ಗೃಹ ಸಚಿವ ಡಾ| ವಿ. ಎಸ್. ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಶಾಸಕರಾದ ಯೋಗೀಶ್ ಭಟ್, ಪೊಲೀಸ್ ಮಹಾನಿರ್ದೇಶಕ ಆರ್. ಶ್ರೀಕುಮಾರ್ ಉಪಸ್ಥಿತರಿದ್ದರು.

ಹಾನಿ: ಸರಕಾರ ಭರಿಸಲಿದೆ
ನಿನ್ನೆಯ ಘಟನೆಯಲ್ಲಿ ಸಂಭವಿಸಿರುವ ಹಾನಿಯನ್ನು ಸರಕಾರದಿಂದ ಭರಿಸಲಾಗುವುದು. ಜೊತೆಯಲ್ಲಿ ಗಾಯಾಳುಗಳ ಆಸ್ಪತ್ರೆ ವೆಚ್ಚ ವನ್ನೂ ಸರಕಾರವೇ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಂಯಮದಿಂದಿರಲು ಮುಖ್ಯಮಂತ್ರಿ ಮನವಿ

ರಾಜ್ಯದಲ್ಲಿ ಧಾರ್ಮಿಕ-ಸಾಂಸ್ಕೃತಿಕ ಅನ್ಯೋನ್ಯತೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಮಾಜಲಿ ಶಾಂತಿ ಕದಡುವ ಜನವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬೆಂಗಳೂರು: ‘ಶಾಂತಿ ಕದಡುವ ಪ್ರಯತ್ನಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಜನತೆ ತಮ್ಮ ಎಂದಿನ ಸಂಯಮ, ಸಹನಾ ಪ್ರವೃತ್ತಿಯನ್ನು ಉಳಿಸಿಕೊಳ್ಳಬೇಕು; ಆ ಮೂಲಕ ಸಮಾಜಘಾತುಕ ಶಕ್ತಿಗಳ ದುಷ್ಟ ಪ್ರಯತ್ನಗಳನ್ನು ಹಿಮ್ಮೆಟ್ಟಿಸಬೇಕು. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನರ್‍ಲಲಿ ಮನವಿ ಮಾಡ್ದಿದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ಅವರು ಸೋಮವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡ್ದಿದಾರೆ.

‘ಶತ ಶತಮಾನಗಳಿಂದಲೂ ರಾಜ್ಯದಲ್ಲಿ ಎಲ ಮತಧರ್ಮಗಳಿಗೆ ಸೇರಿದ ಜನರು ಸೋದರತ್ವ, ಸಹನೆ, ಸಹಿಷ್ಣುತೆ ಮತ್ತು ಸೌಹಾರ್ದದಿಂದ ಬಾಳುತಿದ್ದಾರೆ. ಶಾಂತಿಯೇ ನಮ್ಮ ಜನಜೀವನದ ದಿವ್ಯಮಂತ್ರ. ಹಿಂದುಗಳು, ಬೌದ್ಧರು, ಜೈನರು, ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು... ಹೀಗೆ ಸಕಲ ಜನಾಂಗಗಳ ಅಮೂಲ್ಯ ಕೊಡುಗೆಯಿಂದ ರಾಜ್ಯದ ಸಂಸ್ಕೃತಿ ಸಮೃದ್ಧವಾಗಿ ಬೆಳೆದಿದೆ’ ಎಂದು ಅವರು ಬಣ್ಣಿಸಿದ್ದಾರೆ.

‘ಕಾಲಪ್ರವಾಹದಲ್ಲಿ ಹರಿದುಬಂದ ಎಲ್ಲ ಬಗೆಯ ಮತಭೇದಗಳು, ಸಾಂಸ್ಕೃತಿಕ ವೈವಿದ್ಯಗಳು, ವೈಚಾರಿಕ ಭಿನ್ನತೆಗಳನ್ನು ಅರಗಿಸಿಕೊಂಡೇ ಕರ್ನಾಟಕ ರೂಪುಗೊಂಡಿದೆ. ಕೆಲವೊಮ್ಮೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದ ಸಂದರ್ಭದಲ್ಲೂ ಯಾವತ್ತೂ ಅದು ಅಹಿಂಸೆಯ ಮಟ್ಟವನ್ನು, ಅಶಾಂತಿಯ ಘಟ್ಟವನ್ನು ಮುಟ್ಟಲು ಜನರು ಅವಕಾಶ ಕೊಟ್ಟಿಲ್ಲ. ಆದರೆ ಇತ್ತೀಚೆಗೆ ಕೆಲವು ಹಿತಾಸಕ್ತಿಗಳ ಪ್ರಚೋದನೆಯಿಂದ ಅಸಹನೆ ಪ್ರಕಟವಾಗುತ್ತಿದೆ. ಇದು ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನೂ, ಸಾಂಸ್ಕೃತಿಕ ವೈಶಿಷ್ಟ್ಯವನ್ನೂ ಹಾಳು ಮಾಡುತ್ತಿದೆ. ಇದನ್ನು ತಡೆಯುವುದು ಎಲ್ಲ ಪ್ರಜ್ಞಾವಂತರ ಕರ್ತವ್ಯ’ ಎಂದೂ ಅವರು ತಿಳಿಸಿದ್ದಾರೆ.

ರಾಜ್ಯದ್ಲಲಿ ಧಾರ್ಮಿಕ-ಸಾಂಸ್ಕೃತಿಕ ಅನ್ಯೋನ್ಯತೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಜನವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಮಸ್ಯೆಗೆ ರಾಜಕೀಯ ಆಯಾಮ ಕೊಡುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಕಡ್ಡಿ ಗೀರಿ ಆ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಮಾಜದ ಶಾಂತಿ ಕದಡಲು ವದಂತಿ ಹಬ್ಬಿಸುವ ದುರುಳರ ಕುತಂತ್ರಗಳನ್ನು ಜನರೇ ಸದೆಬಡಿಯಬೇಕು. ಎಲ್ಲ ಕೋಮುಗಳು, ಮತಧರ್ಮಗಳಿಗೆ ಸೇರಿದ ಜನರು ಶಾಂತಿ, ಸಹನೆ, ಸೌಹಾರ್ದಗಳ ಪರವಾಗಿ ನಿಂತರೆ, ದುಷ್ಟಶಕ್ತಿಗಳ ಷಡ್ಯಂತ್ರ ನಡೆಯುವುದಿಲ್ಲ ಎಂದು ಹೇಳಿದ್ದಾರೆ.  

Courtesy: www.gulfkannaiga.com    

No comments: